ಅಗಸಗೆ ನೀರಿನ ಸಮಸ್ಯೆ ವೀಕ್ಷಿಸಿದ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರು..
ಸಮಸ್ಯೆ ಬಗೆಹರಿಸದಿದ್ದರೆ ಪಂಚಾಯತಿ ಅಧಿಕಾರಿಗಳ ವಿರುದ್ದ ದೂರು
ವಾರ ಕಳೆದರೂ ತಿರುಗಿಯೂ ನೋಡದ ಪಿಡಿಒ ಮುಜಾವರ..
ಬೆಳಗಾವಿ : ತಾಲೂಕಿನ ಅಗಸಗೆ ಗ್ರಾಮದ ಅಂಬೇಡ್ಕರ್ ಗಲ್ಲಿಯ ಜನರು ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ದಿನಪತ್ರಿಕೆಗಳ ಮೂಲಕ ತಿಳಿದ ತಕ್ಷಣ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹಾಂತೇಶ ಚಿವಟಗುಂಡಿ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಅಂಬೇಡ್ಕರ ಗಲ್ಲಿ ಜನರ ದೂರು ಆಲಿಸಿದರು.
ಎರಡು ತಿಂಗಳಿಂದ ಅಂಬೇಡ್ಕರ ಗಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿತ್ತು. ಗ್ರಾಮದ ಮಧ್ಯ ಭಾಗದಲ್ಲಿ ಎಸ್ಸಿಪಿ ಅನುದಾನದಲ್ಲಿ ಬೋರ್ ವೆಲ್ ಕೊರೆಸಿದ್ದರೂ, ಆ ನೀರು ಎಸ್ಸಿ ಗಲ್ಲಿ ಹೊರತುಪಡಿಸಿ ಗ್ರಾಮದ ಎಲ್ಲಾ ಗಲ್ಲಿಗೆ ಸರಬರಾಜು ಆಗುತ್ತಿತ್ತು. ಜೆಜೆಎಮ್ ನೀರು ವಾರಗಟ್ಟಲೆ ಬಾರದೇ ಇದ್ದಾಗ ಅಂಬೇಡ್ಕರ ಗಲ್ಲಿಯ ಸುಮಾರು 70 ಕುಟುಂಬಗಳು ಹಂದಿಗನೂರು ಬೆಳಗಾವಿ ರಾಜ್ಯ ಹೆದ್ದಾರಿ ದಾಟಿ ನೀರು ತರಬೇಕಾದ ಪರಿಸ್ಥಿತಿ ಇದೆ. ಯಾವುದೇ ರೀತಿಯ ಅನಾಹುತ ಆದರೆ ಅದಕ್ಕೆ ಯಾರು ಹೊಣೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹಾಂತೇಶ ಚಿವಟಗುಂಡಿ ಅವರನ್ನು ಸಾರ್ವಜನಿಕರು ಪ್ರಶ್ನೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಹಾಂತೇಶ ಚಿವಟಗುಂಡಿ ಅವರು ಅದಷ್ಟು ಬೇಗ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿ ಕೊಡುತ್ತೇನೆ. ತಪ್ಪಿತಸ್ಥ ಪಂಚಾಯತಿ ಪಿಡಿಒ ಹಾಗೂ ಇಂಜಿನಿಯರ್ ವಿರುದ್ಧ ಸಂಬಂಧ ಪಟ್ಟ ಇಲಾಖೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವ ಭರವಸೆ ನೀಡಿದರು.
ಮೇಲಿಂದ ಮೇಲೆ ಇಂತಹ ಪ್ರಕರಣಗಳು ಅಗಸಗೆಯಲ್ಲಿ ನಡೆಯುತ್ತಿದ್ದರೂ ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಸಚಿವರ ಸ್ವ ಕ್ಷೇತ್ರದಲ್ಲೆ ಹೀಗಾದರೆ ಇನೂ ಬೇರೆ ಕಡೆಯ ಪರಿಸ್ಥಿತಿ ಏನು? ಎಂದು ಗ್ರಾಮಸ್ಥರು ಚಿವಟಗುಂಡಿ ಅವರನ್ನು ಪ್ರಶ್ನಿಸಿದರು.
ವಾರ ಕಳೆದರೂ ಭೇಟಿ ನೀಡದ ಪಿಡಿಒ ಮುಜಾವರ..
ಅಂಬೇಡ್ಕರ್ ಗಲ್ಲಿ ಜನರು ಕುಡಿಯುವ ನೀರಿಲ್ಲದೇ ಪರಿತಪಿಸುವ ಸುದ್ದಿ ಒಂದು ವಾರದ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಬಂದರೂ ಕೂಡ ಪಿಡಿಒ ಎನ್.ಎ.ಮುಜಾವರ ಈಕಡೆ ಸುಳಿದಿಲ್ಲ. ಜನರ ಸಮಸ್ಯೆಯನ್ನು ಆಲಿಸಿಲ್ಲ. ನೀರಿನ ಸಮಸ್ಯೆ ಬಗೆ ಹರಿಸುವದಾಗಿ ಕಳೆದ ಒಂದೂವರೆ ವರ್ಷದ ಹಿಂದೆ ಎಸ್ಸಿಪಿ ಅನುದಾನದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದರೂ ಕಾಮಗಾರಿ ಮಾತ್ರ ಕಳಪೆ ಗುಣಮಟ್ಟದಾಗಿದೆ. ನೆಲದಿಂದ ಕೇವಲ ನಾಲ್ಕು ಇಂಚು ಒಳಗೆ ಮಾತ್ರ ಪೈಪ್ ಲೈನ್ ಹಾಕಲಾಗಿದೆ. ಹೀಗಾಗಿ ಪೈಪ್ ಗಳು ಒಡೆದು ಹಾಳಾಗುತ್ತಿವೆ. ಇಂತಹ ಕಳಪೆ ಕಾಮಗಾರಿಗಳ ಬಗ್ಗೆ ನಿಗಾ ವಹಿಸುವರು ಯಾರು? ಕೇವಲ ಎಸ್ಸಿಪಿ ಹಣ ದುರ್ಬಳಕೆ ಮಾಡಲು ಇಂತಹ ಕಾಮಗಾರಿ ಮಾಡಲಾಗುತ್ತಿದೆಯೇ ಎಂದು ಸೇಫ್ ವಾರ್ಡ್ ಸಂಸ್ಥೆ ಅಧ್ಯಕ್ಷ ಸಂತೋಷ ಮೇತ್ರಿ ಆರೊಪಿಸಿದ್ದಾರೆ.

ಪೈಪ್ ಲೈನ್ ಮಾಡುವುದರಲ್ಲೆ ಹಣ ಲೂಟಿ..
ಅಗಸಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂರು ಗ್ರಾಮಗಳಿವೆ. ಮೂರು ಗ್ರಾಮಗಳ ಪೈಕಿ ಅಗಸಗೆಯಲ್ಲಿ ಮಾತ್ರ ಪರಿಶಿಷ್ಟ ಜಾತಿ ಸಮುದಾಯದ ಜನ ಇದೆ. ಈ ಗ್ರಾಮದ ಪರಿಶಿಷ್ಟ ಕಾಲೊನಿಯಲ್ಲಿ ಪ್ರತಿ ವರ್ಷ ಗ್ರಾಮ ಪಂಚಾಯತಿಯವರು ಒಂದಲ್ಲಾ ಒಂದು ಪೈಪ್ ಲೈನ್ ಹಾಕುತ್ತಲೇ ಇದ್ದು ಯಾವ ಪೈಪ್ ಲೈನ್ ಕಾಮಗಾರಿಯೂ ಗುಣಮಟ್ಟದಿಂದ ಆಗಿಲ್ಲ. ಎಲ್ಲವೂ ಕಳಪೆ ಕಾಮಗಾರಿ ಯಾಗಿವೆ.
ಗ್ರಾಮ ಪಂಚಾಯತಿ ಅಧಿಕಾರಿಗಳು ಅಂಬೇಡ್ಕರ್ ಗಲ್ಲಿಗೆ ಎರಡು ವರ್ಷಗಳಲ್ಲಿ ಮೂರು ಬಾರಿ ಪೈಪ್ ಲೈನ್ ಮಾಡಿದ್ದಾರೆ. ಆ ಪೈಪ್ ಲೈನ್ ನಿಂದ ಒಂದು ಹನಿ ನೀರೂ ಅಂಬೇಡ್ಕರ್ ಗಲ್ಲಿಗೆ ಬಂದಿಲ್ಲ. ಆಗಲೇ ಪೈಪ್ ಲೈನ್ ಎಲ್ಲಾ ಒಡೆದು ಹೋಗಿವೆ. ಹಣ ಲೂಟಿ ಹೊಡೆಯಲು ಮಾತ್ರ ಪೈಪ್ ಲೈನ್ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಸಮಾಜ ಕಲ್ಯಾಣ ತಾಲ್ಲೂಕು ಅಧಿಕಾರಿ ಮಹಾಂತೇಶ ಚಿವಟಗುಂಡಿ ಅವರಿಗೆ ದೂರಿದರು.
ಸಂತೋಷ ಮೇತ್ರಿ , ಅಗಸಗೆ