ಬೆಳಗಾವಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಾಟಕೋತ್ಸವ..

ಬೆಳಗಾವಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಾಟಕೋತ್ಸವ..

ಬೆಳಗಾವಿ : ರಂಗಸಂಪದವು ಪ್ರತಿ ವರ್ಷದಂತೆ ಇದೇ ಬುಧವಾರ ಮಾರ್ಚ 27 ರಂದು ವಿಶ್ವರಂಗಭೂಮಿ ದಿನಾಚರಣೆ ಹಮ್ಮಿಕೊಂಡಿದೆ, ಈ ಹಿನ್ನೆಲೆಯಲ್ಲಿ ಮಾರ್ಚ 27 ರಿಂದ 29 ವರೆಗೆ ಮೂರು ದಿನಗಳ ನಾಟಕೋತ್ಸವ ಹಾಗೂ ರಂಗಸಖ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ರಂಗಸಂಪದ ಹಾಗೂ ಭಾರತೀಯ ಜೀವವಿಮಾ ನಿಗಮ ಸಹಯೋಗದಲ್ಲಿ ನಗರದ ಲೋಕಮಾನ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದೆ ಎಂದು ರಂಗಸಂಪದ ಅಧ್ಯಕ್ಷರಾದ ಡಾ.ಅರವಿಂದ ಕುಲಕರ್ಣಿ ತಿಳಿಸಿದರು.

ಅವರು ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತ ನಾಟಕೋತ್ಸವ ಮೊದಲನೆ ದಿನ ಮಾರ್ಚ 27 ರಂದು ಸಂಜೆ 6-00 ಗಂಟೆಗೆ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಅಂದು ಭಾರತೀಯ ಜೀವ ವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿ ಬಿ.ಪಿ.ರವಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.

ರಂಗಸಂಪದ ಪೋಷಕರು ಹಾಗೂ ಹಿರಿಯ ನ್ಯಾಯವಾದಿ ಎಸ್.ಎಂ.ಕುಲಕರ್ಣಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ರಂಗಸಂಪದ ಗೌರವಾಧ್ಯಕ್ಷ ಶ್ರೀಪತಿ ಮಂಜನಬೈಲು ಹಾಗೂ ಡಾ.ಅರವಿಂದ ಕುಲಕರ್ಣಿ ಉಪಸ್ಥಿತರಿರುವರು ಎಂದು ತಿಳಿಸಿದ ಅವರು ರಂಗಸಂಪದ ಕೊಡಮಾಡುವ 2024ರ ಸಾಲಿನ ರಂಗಸಖ ಪ್ರಶಸ್ತಿ ಪ್ರಧಾನ ಸಮಾರಂಭವು ನಡೆಯಲಿದ್ದು, 2024ರ “ರಂಗಸಖ” ಪ್ರಶಸ್ತಿಯನ್ನು, ಖ್ಯಾತ ರಂಗಕರ್ಮಿ ವಿನೋದ ಅಂಬೇಕರ, ಗುಳೇದಗುಡ್ಡ ಇವರಿಗೆ ಪ್ರಧಾನ ಮಾಡಲಾಗುವುದು ಎಂದು ಡಾ. ಅರವಿಂದ ಕುಲಕರ್ಣಿ ತಿಳಿಸಿರು.

ಅದರಂತೆ ರಂಗಸಂಪದ ಹಿರಿಯ ಕಲಾವಿದೆ ನಲಿನಿ ವಿದ್ಯಾಸಾಗರ ಹಾಗೂ ಗುರುದತ್ತ ಪೆಟ್ಟೇಕರ ಅವರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ ಎಂದ ಅವರು ಶ್ರೀರಂಗಪಟ್ಟಣದ ಗಮ್ಯ ತಂಡದವರಿಂದ ಹಾಸ್ಯ ನಾಟಕ “ಪರಿಣಯ ಪ್ರಸಂಗ” ಪ್ರದರ್ಶನವಾಗಲಿದೆ, ರಚನೆ, ಸಂಗೀತ ಮುರಳಿ ಶೃಂಗೇರಿ, ವಿನ್ಯಾಸ, ನಿರ್ದೇಶನ ರಮೇಶ ಬೆಣಚಲ್ ಅವರದ್ದಾಗಿದೆ.

ನಾಟಕೋತ್ಸವ ಎರಡನೆ ದಿನ ಮಾರ್ಚ 28 ರಂದು “ಪರಿಮಳದವರು” ನಾಟಕಕ್ಕೆ ಕಾಣಿಕೆ ನೀಡಿದ ಮಹಾನುಭಾವರನ್ನು ಸನ್ಮಾನಿಸಲಾಗುವುದು. ನಂತರ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ, ಸವದತ್ತಿ ಇವರಿಂದ “ಬಾಸಿಂಗ ಬಲ” ನಾಟಕ ಪ್ರದರ್ಶನವಾಗಲಿದೆ. ರಚನೆ: ಶ್ರೀನಿವಾಸ ವೈದ್ಯ, ರಂಗರೂಪ, ನಿರ್ದೇಶನ. ಝಕೀರ ನದಾಫ್ ಅವರದ್ದಾಗಿದೆ.

ನಾಟಕೋತ್ಸವ ಕೊನೆಯ ದಿನ ಮಾರ್ಚ 29 ರಂದು ರಂಗಸಂಪದ ಬೆಳಗಾವಿ ತಂಡದಿಂದ ರಾಘವೇಂದ್ರ ಸ್ವಾಮಿ ಜೀವನಾಧಾರಿತ ನಾಟಕ “ಪರಿಮಳದವರು” ಪ್ರದರ್ಶನಗೊಳ್ಳಲಿದೆ. ರಚನೆ ಜಿ.ಬಿ.ಜೋಷಿ (ಜಡಭರತ), ನಿರ್ದೇಶನ ಶ್ರೀಪತಿ ಮಂಜನಬೈಲು ಅವರದಾಗಿದೆ ಎಂದು ರಂಗಸಂಪದ ಅಧ್ಯಕ್ಷರ ಡಾ.ಅರವಿಂದ ಕುಲಕರ್ಣಿ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಂಗಸಂಪದ ಕಾರ್ಯದರ್ಶಿಗಳಾದ ಪ್ರಸಾದ ಕಾರಜೋಳ, ಗುರುನಾಥ ಕುಲಕರ್ಣಿ,ರಾಮಚಂದ್ರ ಕಟ್ಟಿ, ಅನಂತ ಪಪ್ಪು, ಮುಂತಾದವರು ಉಪಸ್ಥಿತರಿದ್ದರು

ವರದಿ ಪ್ರಕಾಶ ಕುರಗುಂದ..