ಮತ್ತೊಮ್ಮೆ ಜನಪರ ಕಾಳಜಿ ಮಿಡಿದ ಸಚಿವ ಸತೀಶ ಜಾರಕಿಹೊಳಿ..
ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಚಿವರ ಸೂಕ್ತ ಸಲಹೆ..
ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಿ…
ನಗರವಾಸಿಗಳ ಅಭಿಮತ..
ಬೆಳಗಾವಿ : ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಯ ಜನರ ಸಮಸ್ಯೆಗೆ ಸದಾಕಾಲ ಸ್ಪಂದಿಸುತ್ತಾ ಬಂದಿದ್ದು, ಮೊನ್ನೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಕುರಿತಾಗಿ ಮತ್ತೊಮ್ಮೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿ, ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುವದರ ಮೂಲಕ ಬರುವ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯಪ್ರವರ್ತರಾಗಲು ಸೂಚಿಸಿದ್ದಾರೆ…

ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ವರ್ಷದಂತೆ ಜೂನ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಆಗಬೇಕಾದಷ್ಟು ಪ್ರಮಾಣದ ಮಳೆ ಈ ವರ್ಷ ಆಗಲಿಲ್ಲ, ,2022ರಲ್ಲಿ ಸರಾಸರಿ 1194 ಮಿಮಿ ಮಳೆ ಆಗಿದ್ದರೆ, 2023ರಲ್ಲಿ ಕೇವಲ 679 ಮಿಮಿ ಮಳೆ ಆಗಿದ್ದು, ಪ್ರತಿ ವರ್ಷಕ್ಕಿಂತ ಅರ್ಧದಷ್ಟು ಮಳೆ ಕಡಿಮೆಯಾಗಿದೆ ಎಂಬ ಮಾಹಿತಿ ಇದೆ, ಈ ಹಿನ್ನೆಲೆಯಲ್ಲಿ, ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ಈಗಿನಿಂದಲೇ ಅಂದರೆ, ಜನೆವರಿ ತಿಂಗಳ ಆರಂಭದಿಂದಲೇ ಕುಡಿಯುವ ನೀರಿಗೆ ಅಭಾವದ ಪರಿಸ್ಥಿತಿ ಎದುರಾಗಿದ್ದು, ಮುಂದೆ ಬರುವ ಬೇಸಿಗೆ ಕಾಲದ, ಏಪ್ರಿಲ್ ಮೇ ತಿಂಗಳುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅತ್ಯಂತ ಗಂಭೀರವಾಗಿ ಕಾಡುವ ಅಂಶವಾಗುವದರಲ್ಲಿ ಸಂಶಯವಿಲ್ಲದಂತಾಗಿದೆ..
ಈ ವಿಷಯದ ಕುರಿತಾಗಿ ಮುಂದಾಲೋಚನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಿಸಿದ ಕೆಲ ಇಲಾಖೆಯ ಅಧಿಕಾರಿಗಳಿಗೆ ಕುಡಿಯುವ ನೀರಿನ ಸದುಪಯೋಗದ ಕುರಿತು ಮಾರ್ಗದರ್ಶನ ನೀಡಿದ್ದು, ಈಗಿರುವ ಕುಡಿಯುವ ನೀರಿನ ಸಂಗ್ರಹವನ್ನು ವ್ಯವಸ್ಥಿತವಾಗಿ ಹಾಗೂ ಮಿತವಾಗಿ ಬಳಕೆ ಮಾಡಲು, ನಗರದಲ್ಲಿ ಇರುವ ಕೊಳವೆ ಬಾವಿಗಳ, ತೆರೆದ ಬಾವಿಗಳ, ಇತರ ನೀರು ಸಂಗ್ರಹದ ಮೂಲಗಳನ್ನು ಕ್ರೂಢಿಕರಿಸುವದು, ಮತ್ತು ಅವುಗಳ ಶುದ್ಧೀಕರಣ ಕಾರ್ಯ ಮಾಡುವದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿರುವ ಮಾಹಿತಿಯಿದೆ..

ಇದೇ ವಿಷಯದ ಕುರಿತಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ ಜಾರಕಿಹೊಳಿ ಅವರು, ಮಳೆ ಕಡಿಮೆ ಆಗಿದ್ದರಿಂದ ಮುಂದೆ ಸ್ವಲ್ಪ ಸಮಸ್ಯೆ ಬರಬಹುದು, ಈಗಾಗಲೇ ಕುಡಿಯುವ ನೀರಿನ ಮೂಲಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗ ಮಾಡುವ ಯೋಜನೆ ಮಾಡಿದ್ದು, ಅವಶ್ಯಕತೆ ಇದ್ದರೆ, ಪ್ರತಿ ಸ್ಥಳಗಳಿಗೂ ಟ್ಯಾಂಕ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತವೆ ಎಂಬ ಮಾಹಿತಿ ನೀಡಿದ್ದರು..

ಅಧಿಕಾರಿಗಳು ಜನಜಾಗೃತಿ ಮಾಡಬೇಕು, ಸಾರ್ವಜನಿಕರಲ್ಲಿ ಮಿತವಾದ ನೀರಿನ ಬಳಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಹಾನಗರ ಪಾಲಿಕೆ, ನೀರು ಸರಬರಾಜು ಹಾಗೂ ಇತರ ಇಲಾಖೆಯ ಅಧಿಕಾರಿಗಳು ಮಾಡಬೇಕು, ಕುಡಿಯುವ ನೀರಿನಿಂದ ಮನೆ ಎದುರಿನ ರಸ್ತೆ ಸ್ವಚ್ಚ ಮಾಡುವದು, ವಾಹನಗಳ ಸ್ವಚ್ಛತೆ, ಮೈದಾನಕ್ಕೆ ನೀರು ಬಿಡುವದು ಇಂತಹ ನೀರು ನಷ್ಟದ ಕಾರ್ಯವನ್ನು ಮಾಡದಂತೆ ಸಾರ್ವಜನಿಕರನ್ನು ಎಚ್ಚರಿಸಬೇಕು ಎಂಬುದು ಕೆಲ ನಗರವಾಸಿಗಳ ಅಭಿಪ್ರಾಯವಾಗಿದೆ..
ವರದಿ ಪ್ರಕಾಶ್ ಕುರಗುಂದ….