ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ,- ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆ ರದ್ದಾಗಬೇಕು..
ಕುಡಿಯುವ ನೀರಿಗೆ ನಮಗೆ ಕೊರತೆ ಇರುವಾಗ ಕೈಗಾರಿಕೆಗೆ ಹೇಗೆ ಕೊಡುವದು?
ಸರ್ಕಾರ ಈ ಯೋಜನೆ ಕೈಬಿಡದಿದ್ದರೆ ಬೆಳಗಾವಿಗರ ಬಂಡಾಯ ಎದುರಿಸಬೇಕಾಗುತ್ತದೆ.
ದೀಪಕ್ ಗುಡಗನಟ್ಟಿ, ಜಿಲ್ಲಾಧ್ಯಕ್ಷರು ಕರವೇ ಬೆಳಗಾವಿ..
ಬೆಳಗಾವಿ : ಜಿಲ್ಲೆ ಭೌಗೋಳಿಕವಾಗಿ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದೆ, ಹದಿನೈದು ತಾಲ್ಲೂಕು ಹದಿನೆಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ವಿಶಾಲ ಜಿಲ್ಲೆಯಾಗಿದೆ, ಬೆಳಗಾವಿ ಮಹಾನಗರಕ್ಕೆ ಮತ್ತು ಹಲವಾರು ತಾಲ್ಲೂಕುಗಳ ನೂರಾರು ಗ್ರಾಮಗಳಿಗೆ ಹಿಡಕಲ್ ಜಲಾಶಯದಿಂದಲೇ ನೀರು ಪೂರೈಕೆ ಮಾಡಲಾಗುತ್ತಿದೆ.
ಈ ಜಲಾಶಯ ಬೆಳಗಾವಿ ಮಹಾನಗರಕ್ಕೆ ನೀರು ಪೂರೈಸುವ ಮುಖ್ಯ ಜಲದ ಮೂಲವಾಗಿದ್ದು, ಪ್ರತಿವರ್ಷ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಹಿಡಕಲ್ ಜಲಾಶಯ ಖಾಲಿಯಾಗಿ ಬೆಳಗಾವಿ ಜಿಲ್ಲೆಯಲ್ಲಿ ನೀರಿನ ಅಭಾವದಿಂದಾಗಿ ಜಿಲ್ಲೆಯ ಜನ ಹಾಗೂ ಬೆಳಗಾವಿ ಮಹಾನಗರದ ಜನತೆ ನೀರಿನ ಸಮಸ್ಯೆ ಎದುರಿಸುತ್ತಾರೆ.

ಹಿಡಕಲ್ ಜಲಾಶಯದಿಂದ ಬೇಸಿಗೆಯಲ್ಲಿ ಎಡದಂಡೆ ಮತ್ತು ಬಲದಂಡೆ ಎರಡೂ ಕಾಲುವೆಗಳಿಂದ ಕೃಷಿ ಜಮೀನುಗಳಿಗೆ ನೀರು ಹರಿಸಲಾಗುತ್ತಿದ್ದು ಹಿಡಕಲ್ ಜಲಾಶಯ ಬೆಳಗಾವಿ ಜಿಲ್ಲೆಯ ಜೀವನಾಡಿಯಾಗಿದೆ. ಬೆಳಗಾವಿಯ ನವೀಲು ತೀರ್ಥ ಜಲಾಶಯದಿಂದ ಈಗಾಗಲೇ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಿಗೆ ನೀರು ಪೂರೈಸಲಾಗುತ್ತಿದೆ ಇದಕ್ಕೆ ಬೆಳಗಾವಿ ಜಿಲ್ಲೆಯ ಜನ ಎಂದಿಗೂ ವಿರೋಧ ಮಾಡಿಲ್ಲ ಮುಂದೆಯೂ ವಿರೋಧ ಮಾಡುವದಿಲ್ಲ ಆದ್ರೆ ಸರ್ಕಾರ ಈಗ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಪ್ರದೇಶ ಮಂಡಳಿಯಿಂದ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ- ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 0.5 ಟಿಎಂಸಿ ನೀರು ಪೂರೈಸುವ ಕಾಮಗಾರಿ ಆರಂಭಿಸಿದ್ದು ಸರ್ಕಾರ ಕೂಡಲೇ ಈ ಯೋಜನೆಯನ್ನು ರದ್ದು ಮಾಡಿ ಕಾಮಗಾರಿಯನ್ನು ನಿಲ್ಲಿಸಬೇಕು.
ಈ ವಿಚಾರ ಬೆಳಗಾವಿ ಜಿಲ್ಲೆಯ ಮಹತ್ವದ ವಿಚಾರವಾಗಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಈ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಬೆಳಗಾವಿ ಜಿಲ್ಲೆಯ ಎಲ್ಲ ಸಂಘಟನೆಗಳು ಮತ್ತು ರೈತರು ಸೇರಿಕೊಂಡು ಕಾಮಗಾರಿಯನ್ನು ತಡೆಯ ಬೇಕಾಗುತ್ತದೆ. ಸರ್ಕಾರ ಬೆಳಗಾವಿ ಜಿಲ್ಲೆಯ ಬಂಡಾಯ ಎದುರಿಸಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ.
ನಮ್ಮ ಬೇಡಿಕೆಗೆ ತಾವುಗಳು ತ್ವರಿತಗತಿಯಲ್ಲಿ ಸ್ಪಂದಿಸಿ ನೀರು ಪೂರೈಸುವ ಯೋಜನೆಯನ್ನು ರದ್ದು ಮಾಡಿ ಬೆಳಗಾವಿ ಜಿಲ್ಲೆಯ ಹಿತ ಕಾಯಬಹುದು ಎನ್ನುವ ವಿಶ್ವಾಸ ನಮಗಿದೆ.
ವರದಿ ಪ್ರಕಾಶ ಬಸಪ್ಪ ಕುರಗುಂದ..