ನವೆಂಬರ್ ನಲ್ಲಿ ನೂತನ ಡಿಸಿ ಕಚೇರಿ ನಿರ್ಮಾಣ ಕಾರ್ಯಾರಂಭ.

ನವೆಂಬರ್ ನಲ್ಲಿ ನೂತನ ಡಿಸಿ ಕಚೇರಿ ನಿರ್ಮಾಣ ಕಾರ್ಯಾರಂಭ.

ಖಾಸಗಿ ಕಾಲೇಜಿನಲ್ಲಾದ ಘಟನೆಗೆ ಸರ್ಕಾರದ ದೋಷಣೆ ಸರಿಯಲ್ಲ..

ಸತೀಶ ಜಾರಕಿಹೊಳಿ ಟ್ರೋಫಿಗೆ ಮಳೆಯ ತೊಂದರೆ ಆಗದು..

ಸಚಿವ ಸತೀಶ್‌ ಜಾರಕಿಹೊಳಿ..

ಬೆಳಗಾವಿ: ಜಿಲ್ಲೆಯಲ್ಲಿ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕೆಂದು ಸಚಿವನಾದ ಮೊದಲ ದಿನವೇ ಪಣತೊಟ್ಟಿದ್ದು, ನನ್ನ ಪ್ರಯತ್ನದ ಫಲವಾಗಿಯೇ ಬರುವ ನವೆಂಬರ್‌ ತಿಂಗಳಲ್ಲಿ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ತಿಳಿಸಿದರು.

ನಗರದ ಬೂಡಾ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗಾಗಿ ನಾನು ಸಚಿವನಾದ ಮೊದಲ ದಿನದಿಂದಲೇ ಕಾರ್ಯಪ್ರವೃತ್ತನಾಗಿದ್ದೇನೆ. ನೂತನ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣವಾಗಬೇಕೆಂಬುವುದು ನನ್ನ ಕನಸಾಗಿತ್ತು. ಇಂದು ಅದು ಸಾಕಾರಗೊಂಡಿದೆ. ಈ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಮೂರು ವರ್ಷ ಅವಧಿ ಬೇಕಾಗುತ್ತದೆ. ಇನ್ನು ಮೇಲ್ಸೇತುವೆ ನಿರ್ಮಾಣಕ್ಕೆ ಎರಡು ವರ್ಷ ಸಮಯ ಬೇಕಾಗುತ್ತದೆ ಎಂದು ತಿಳಿಸಿದರು.

ಇನ್ನು ಸ್ಮಾಟ್‌ ಸಿಟಿ ಯೋಜನೆಯಡಿ ನಿರ್ಮಾಣಗೊಂಡ ಕೆಲ ಕಟ್ಟಡಗಳನ್ನು ನಿನ್ನೆಯ ಸಿಎಂ ಸಿದ್ದರಾಮಯ್ಯನವರು ಲೋಕಾರ್ಪಣೆಗೊಳಿಸಿದ್ದಾರೆ. ಇನ್ನು ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರತಿ ಬಾರಿ ಕೊಯ್ನಾ ಜಲಾಶಯದಿಂದ ಕರ್ನಾಟಕಕ್ಕೆ ನೀರು ಬಿಡಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ, ಆದರೆ ಇದುವರೆಗೆ ಮಹಾರಾಷ್ಟ್ರ ಸರ್ಕಾರ ರಾಜ್ಯಕ್ಕೆ ನೀರು ಬಿಟ್ಟಿಲ್ಲ. ಮಳೆಗಾಲದಲ್ಲಿ ನಮ್ಮ ರಾಜ್ಯದಿಂದ ಮಹಾರಾಷ್ಟ್ರದ ಜತ್ತ ತಾಲೂಕಿಗೆ ನೀರು ಹರಿಸಿದರೆ ಅವರು ನಮಗೆ ಬೇಸಿಗೆಯಲ್ಲಿ ಕೃಷ್ಣಾ ನದಿಗೆ ನೀರು ಬಿಡಲು ಒಪ್ಪುತ್ತಾರೆ. ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಯೋಜನೆ ರೂಪಿಸಬೇಕೆಂದರು.

ನಗರದಲ್ಲಿ ಬ್ರಾಹ್ಮಣ ಸಮಾಜದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಾಸಕ ಅಭಯ ಪಾಟೀಲ್‌ ಅವರು ನೇತೃತ್ವ ವಹಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿ ಅವಮಾನ ಮಾಡಿದ ಪ್ರಕರಣಕ್ಕೆ ಸರ್ಕಾರವನ್ನು ದೂಷಿಸುವುದು ಸರಿಯಲ್ಲ. ಅದು ಖಾಸಗಿ ಕಾಲೇಜಿನಲ್ಲಿ ಆದ ಘಟನೆ. ಹೀಗಾಗಿ ಸರ್ಕಾರದ ಮೇಲೆ ಗೂಭೆ ಕೂರಿಸುವುದು ತಪ್ಪು. ಇನ್ನು ಶಾಸಕ ಅಭಯ ಪಾಟೀಲ್‌ ಅವರು ಹಲವು ಸಮಸ್ಯೆಗಳಿದ್ದರು ಪ್ರತಿಭಟಿಸಲ್ಲ. ಶಾಲೆ ಬೇಕೆಂದು ಪ್ರತಿಭಟನೆ ನಡೆಸಲ್ಲ. ಆದರೆ ರಾಜಕೀಯ ಉದ್ದೇಶದಿಂದ ಅವರೇ ಇಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆಂದು ತಿಳಿಸಿದರು.

ರಾಹುಲ್‌ ಜಾರಕಿಹೊಳಿ ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಸ್ಥಾನಕ್ಕೆ ಸ್ಫರ್ಧೆ ಮಾಡುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ರಾಹುಲ್‌ ಜಾರಕಿಹೊಳಿ ಈಚೆಗೆ ನಡೆದ ಕೆಪಿಸಿಸಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಸ್ಥಾನಕ್ಕೆ ಸ್ಫರ್ಧೆ ಮಾಡುವ ಕುರಿತು ಇನ್ನು ಮುಖಂಡರ ಜತೆ ಚರ್ಚಿಸಿಲ್ಲ. ಈ ಕುರಿತು ಮುಖಂಡರ ಮತ್ತು ಸೊಸೈಟಿ ಸದಸ್ಯರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸೌತ್‌ ಆಪ್ರಿಕಾದಲ್ಲಿ ಜಾಗರವನ್ನು ಖರೀದಿಸಿದ್ದು, ಅಲ್ಲಿ ಕ್ರೀಡಾ ಶಾಲೆಯನ್ನು ನಿರ್ಮಾಣಗೊಳಿಸಬೇಕೆಂದು ನಿರ್ಧರಿಸಿದ್ದೇನೆ. ಶೀಘ್ರದಲ್ಲಿ ಸೌತ್‌ ಆಪ್ರಿಕಾದಲ್ಲಿ ಕ್ರೀಡಾ ಶಾಲೆ ನಿರ್ಮಿಸುತ್ತೇನೆಂದು ಇದೇ ವೇಳೆ ಮಾಹಿತಿ ನೀಡಿದರು.

ಇನ್ನು ಮೇ ಮೂರರಿಂದ ನಗರದ ಸರ್ದಾರ ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ ಡಾ ಸತೀಶ ಜಾರಕಿಹೊಳಿ ಟೆನಿಸ್ ಬಾಲ್ ಕ್ರಿಕೆಟ್ ಕ್ರೀಡಾಕೂಟದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೌದು ಕ್ರೀಡಾಕೂಟದ ಆಯೋಜನೆಯ ತಯಾರಿ ನಡೆಯುತ್ತಿದೆ, ಕ್ರಿಕೆಟ್ ಪಂದ್ಯಾವಳಿಗೆ ಮಳೆಯ ಸಮಸ್ಯೆ ಬಹುಶ ಆಗಲಾರದು, ಜೂನ್ ಜುಲೈನಲ್ಲಿ ಮಳೆ ಬರುತ್ತದೆ, ಒಂದು ವೇಳೆ ಬಂದರೂ ಕೂಡಾ ಸಂಜೆ ಬರಬಹುದು, ಅದೇನು ದೊಡ್ಡ ಸಮಸ್ಯೆ ಆಗದು ಎಂದಿದ್ದಾರೆ.

ಈ ಸಂರ್ಭದಲ್ಲಿ ಶಾಸಕ ಆಸೀಪ್‌ (ರಾಜು) ಸೇಠ್‌, ಬೆಳಗಾವಿ ಬೂಡಾ ಅಧ್ಯಕ್ಷ ಲಕ್ಷಣರಾವ್‌ ಚಿಂಗಳೆ ಇದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..