ಮಹಾನಗರ ಪಾಲಿಕೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ..
ನಾವೆಲ್ಲ ಒಂದೇ ಎಂಬ ಭಾವನೆಯೇ ದೇಶದ ಅಭಿವೃದ್ಧಿ..
ದೇಶದ ಬೆಳವಣಿಗೆಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು..
ಮೇಯರ ಪ್ರೀತಿ ವಿನಾಯಕ ಕಾಮಕರ..
ಬೆಳಗಾವಿ : ಇಲ್ಲಿನ ಮಹಾನಗರ ಪಾಲಿಕೆಯ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು, ಈ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿದ ಮೇಯರ ಪ್ರೀತಿ ಕಾಮಕರ್ ಅವರು ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು.

ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯವೆಂದರೆ ಕೇವಲ ಧ್ವಜ ಹಾರಿಸಿ ಸಂಭ್ರಮಿಸುವುದು ಅಷ್ಟೇ ಅಲ್ಲಾ, ಯೋಚಿಸುವ, ಮಾತನಾಡುವ, ದೇಶ ಕಟ್ಟುವ ಸ್ವಾತಂತ್ರ್ಯ ಆಗಿದೆ, ಜಾತಿ-ಮತಗಳ ಬೇದಭಾವ ಬಿಟ್ಟು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳಿದಾಗ ದೇಶದ ಅಭಿವೃದ್ಧಿ ಆಗುವುದು ಎಂದರು. ದೇಶದ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು, ನಾವೆಲ್ಲರೂ ಭಾರತೀಯರು ಎಂಬ ಭಾವನೆಯೊಂದಿಗೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಉಪಮೇಯರ್ ಹಣಮಂತ ಕೊಂಗಾಲಿ ಮಾತನಾಡಿ, ೮೦ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ವೀರ ಹೋರಾಟಗಾರರು ಹಾಗೂ ಮಹನೀಯರನ್ನು ಸ್ಮರಿಸಬೇಕು. ಅವರ ತ್ಯಾಗ ಮತ್ತು ಹೋರಾಟದ ಫಲವಾಗಿ ಇಂದು ನಾವೆಲ್ಲರೂ ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಹೀಗಾಗಿ ಹೆಮ್ಮೆಯ ಭಾರತವನ್ನು ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಎಲ್ಲ ಸಮುದಾಯಗಳನ್ನು ಸಮಾನವಾಗಿ ಕರೆದೊಯ್ಯುವ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿ ಮಾಡುವುದು ನಮ್ಮೆಲ್ಲರ ಗುರಿಯಾಗಬೇಕು. ಮುಂದಿನ ದಿನಗಳಲ್ಲಿ ಇಡೀ ವಿಶ್ವಕ್ಕೆ ಭಾರತವನ್ನು ವಿಶ್ವಗುರು ಎಂದು ಸಾರುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ಎಂ. ಕಾರ್ತಿಕ್ ಮಾತನಾಡಿ, ಭಾರತವು ಇಂದು ಅತಿದೊಡ್ಡ ಯುವಶಕ್ತಿಯನ್ನು ಹೊಂದಿರುವ ದೇಶವಾಗಿದೆ. ಯುವ ಪೀಳಿಗೆಯ ಶಕ್ತಿಯನ್ನು ಪ್ರಜಾಸತ್ತಾತ್ಮಕವಾಗಿ ಸಮರ್ಪಕವಾಗಿ ಬಳಸಿಕೊಂಡರೆ ದೇಶ ಮತ್ತಷ್ಟು ಪ್ರಗತಿ ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರವೂ ಮಹತ್ವದ್ದಾಗಿದೆ. ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನದ ಅಗತ್ಯವಿದೆ ಎಂದರು.
ಭಾರತ ಇಂದು ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಮಹಿಳಾ ಸಬಲೀಕರಣ, ಮಹಿಳಾ ಮೀಸಲಾತಿ, ಬಾಹ್ಯಾಕಾಶ ಕ್ಷೇತ್ರದ ಸಾಧನೆ, ಆರ್ಥಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿನ ಬೆಳವಣಿಗೆಗಳು ದೇಶದ ಪ್ರಗತಿಯನ್ನು ತೋರಿಸುತ್ತಿವೆ. ಯುವಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡು ಭಾರತವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
ಧ್ವಜಾರೋಹಣದ ನಂತರ ಪಾಲಿಕೆ ಆವರಣದ ಅಂಬೇಡ್ಕರ ಪುತ್ತಳಿಗೆ ದ್ವೀಪ ಬೆಳಗಿಸಿ, ಪುಷ್ಪಾರ್ಚನೆ ನೆರವೇರಿಸಿದ ಗಣ್ಯರು ಭಾರತರತ್ನ ಬಾಬಾಸಾಹೇಬ ಅಂಬೇಡ್ಕರ ಅವರ ಹೆಸರಿನಲ್ಲಿ ಜೈಕಾರ ಕೂಗಿದರು, ಇದೇ ವೇಳೆ ಸ್ವಾತಂತ್ರೋತ್ಸವದ ಸಂಭ್ರಮಕ್ಕಾಗಿ, ಕಂದಾಯ ಉಪ ಆಯುಕ್ತ ಡಾ ಸಿದ್ದು ಹುಲ್ಲೋಳ್ಳಿ ಅವರ ಮಾರ್ಗದರ್ಶನದಲ್ಲಿ ತಮ್ಮ ವಿಶೇಷ ಸಮವಸ್ತ್ರಗಳನ್ನು ಧರಿಸಿಕೊಂಡು ಬಂದಂತ ಪಾಲಿಕೆಯ ಕಂದಾಯ ವಿಭಾಗದ ಸಿಬ್ಬಂದಿಗಳು ಎಲ್ಲರ ಗಮನ ಸೆಳೆದಿದ್ದು ವಿಶೇಷವಾಗಿತ್ತು.

ಇದೇ ವೇಳೆ ಪಾಲಿಕೆಯ ಅಭಿವೃದ್ಧಿ ವಿಭಾಗದಿಂದ ಹೊಸದಾಗಿ ನಿರ್ಮಿತವಾದ ಭದ್ರತಾ ಸಿಬ್ಬಂದಿಗಳ ಕೊಠಡಿಗಳನ್ನು ಮೇಯರ್ ಹಾಗೂ ಉಪಮೇಯರ ಅವರು ಉದ್ಘಾಟನೆ ಮಾಡಿದರು, ಸೆಕ್ಯೂರಿಟಿ ಗಾರ್ಡಗಳಿಗೆ ಮಳೆ ಬಿಸಿಲಿನಲ್ಲಿ ಕುಳಿತುಕೊಳ್ಳಲು, ಊಟ ಉಪಹಾರ ವಿಶ್ರಾಂತಿ ಮಾಡಲು ಅನುಕೂಲ ಆಗುವಂತಹ ಈ ಕೊಠಡಿಗಳಿಂದ ಭದ್ರತಾ ಸಿಬ್ಬಂದಿಗಳು ಸಂತಸಗೊಂಡಿದ್ದಾರೆ.

ಈ ವೇಳೆ ಪಾಲಿಕೆಯ ಆಡಳಿತ ಪಕ್ಷದ ನಾಯಕ, ಪಾಲಿಕೆ ಸದಸ್ಯರು, ಪಾಲಿಕೆಯ ಕಂದಾಯ, ಆರೋಗ್ಯ, ಅಭಿವೃದ್ಧಿ, ಆಡಳಿತ, ಲೆಕ್ಕ, ನಗರ ಯೋಜನೆ ವಿಭಾಗಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪಥಸಂಚಲನ ನೆರವೇರಿಸಿದ ಪೌರ ಕಾರ್ಮಿಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ ಪ್ರಕಾಶ ಬಿ ಕೆ..
