ಕನ್ನಡಪರ ಹೋರಾಟದ ನೂರು ದಿನಕ್ಕೆ ನೂರು ಈಡುಗಾಯಿ ಒಡೆದ ಸಂಘಟಕರು..
ಪಾಲಿಕೆಯ ಬಿಜೆಪಿ ಆಡಳಿತ ಪಕ್ಷಕ್ಕೆ ಸದ್ಭುದ್ದಿ ನೀಡಲೆಂದು ಗಣೇಶನಿಗೆ ವಿಶೇಷ ಪೂಜೆ..
ಬೆಳಗಾವಿ : ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಆಗ್ರಹಿಸಿ ಕಳೆದ ನೂರು ದಿನಗಳಿಂದ ನಡೆದ ಕನ್ನಡ ಸಂಘಟನೆಗಳ ಹೋರಾಟ
ಶುಕ್ರವಾರ ವಿಘ್ನೇಶ್ವರನನ್ನೂ ತಲುಪಿದೆ.
ಕಳೆದ ಮಾರ್ಚ 26 ರಿಂದ ಆರಂಭವಾದ ಈ ಹೋರಾಟಕ್ಕೆ ಜೂನ್ 26 ರಂದು ನೂರು ದಿನಗಳನ್ನು
ಪೂರ್ಣಗೊಳಿಸಿದ ಸಂದರ್ಭದಲ್ಲಿ ಕನ್ನಡ ಸಂಘಟನೆಗಳ
ಮುಖಂಡರು ಶುಕ್ರವಾರ ಮುಂಜಾನೆ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 101 ಈಡುಗಾಯಿಗಳನ್ನು ಒಡೆಯುವ ಮೂಲಕ ಬೆಳಗಾವಿ
ಪಾಲಿಕೆಯ ಮಹಾಪೌರರು ಮತ್ತು ಉಪ ಮಹಾಪೌರರಿಗೆ ಸದ್ಬುದ್ಧಿ ಕೊಡುವಂತೆ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ,ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಗಡಿವಿವಾದ ಪರಿಹಾರಕ್ಕೆ ಮಹಾಜನ ವರದಿಯೇ ಅಂತಿಮ ಎಂಬ ಗೊತ್ತುವಳಿ ಅಂಗೀಕರಿಸುವವರೆಗೆ ಕನ್ನಡ ಸಂಘಟನೆಗಳ ಹೋರಾಟ ನಿಲ್ಲುವುದಿಲ್ಲ. ಈಗಲಾದರೂ ಬಿಜೆಪಿ ನಾಯಕರು ಗಡಿಭಾಗದ ಹಾಗೂ ನಾಡಿನ ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಂಡು ಗೊತ್ತುವಳಿ ಅಂಗೀಕರಿಸಬೇಕೆಂದು ಆಗ್ರಹಿಸಿದರು.
ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ ಮಾತನಾಡಿ, ಗೊತ್ತುವಳಿ ಪಾಸು ಮಾಡದಿದ್ದರೆ ಕನ್ನಡ ಸಂಘಟನೆಗಳ ಹೋರಾಟ ಯಾವ ಸ್ವರೂಪ ಪಡೆಯುವುದು ಎಂಬುದನ್ನು ಹೇಳಲಾಗದು ಎಂದು ಎಚ್ಚರಿಸಿದರು.
ಕನ್ನಡ ಸಂಘಟನೆಗಳ ಮುಖಂಡರಾದ ವಾಜಿದ್ ಹಿರೆಕೋಡಿ, ಬಲರಾಮ ಮಾಸೇನಟ್ಟಿ, ಶ್ರೀನಿವಾಸ ತಾಳುಕರ,
ಮೈನು ಮಕಾನದಾರ, ಮಹೇಶ ಶೀಗಿಹಳ್ಳಿ, ಬಾಳಪ್ಪ ಗುಡಗೇನಟ್ಟಿ, ಮಲ್ಲಪ್ಪ ಗುಡಗೇನಟ್ಟಿ, ಸಿಡ್ಲಿಂಗಪ್ಪ ಸುಣಕುಪ್ಪಿ, ಶರೀಫ್ ಸನದಿ, ಸಂತೋಷ ತಳ್ಳಿಮನಿ, ಶಿವಾಜಿ ಗುರವ, ಸಂತೋಷ ಮಾಸೇನಟ್ಟಿ, ಆನಂದ ಬಿಲಾವರ, ರಾಜು ಕೋಲಾ, ಸರ್ವಮಂಗಳ ಅರಳಿಮಟ್ಟಿ ಮುಂತಾದವರು ಪೂಜಾ ಕಾರ್ಯಕ್ರಮದಲ್ಲಿ
ಪಾಲ್ಗೊಂಡಿದ್ದರು.